WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, October 21, 2020

ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶ್ನಾತೀತ ನಾಯಕ – ಸಚಿವ ಸೋಮಣ್ಣ

 ಇದು ಪಕ್ಷದ ಹೈಕಮಾಂಡ್‌ಗೂ ಕೂಡ ಇದು ಗೊತ್ತಿದೆ. ಯತ್ನಾಳ್ ಅವರಿಗೆ ಮತ್ತೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ, ಇಂತಹ ಹೇಳಿಕೆಗಳನ್ನು ನೀಡುವವರ ಬಗ್ಗೆ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ

ಸಿಎಂ ಬದಲಾವಣೆ ಹೇಳಿಕೆ ಹಳೆಯದು. ಪುನರಾವರ್ತನೆ ಮಾಡಿದರೆ ವ್ಯಕ್ತಿ ಗಾಂಭೀರ್ಯತೆ ಕಳೆದುಕೊಳ್ಳುತ್ತಾರೆ. ಪದೇ ಪದೇ ಹೇಳುವುದು ಒಳ್ಳೆಯ ಲಕ್ಷಣವಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಟಾಂಗ್ ನೀಡಿದ್ದಾರೆ.

ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರ ನಡೆಸಲು ತೆರಳುವುದಕ್ಕೂ ಮೊದಲು ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿಯನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಹೇಳಿದ್ದನ್ನೇ ಯಾರೂ ಹೇಳಬಾರದು. ಯತ್ನಾಳ್ ಅವರಿಗೆ ಮತ್ತೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ಪಕ್ಷದ ಹೈಕಮಾಂಡ್‌ಗೂ ಕೂಡ ಇದು ಗೊತ್ತಿದೆ. ಇಂತಹ ಹೇಳಿಕೆಗಳನ್ನು ನೀಡುವವರ ಬಗ್ಗೆ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ಯತ್ನಾಳ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿಮಾಡಿಸಿದರೆ ಏನಾಗುತ್ತದೆ ಎಂಬ ಸಂದೇಶ ಪಕ್ಷದ ವರಿಷ್ಠರಿಗೆ ಹೋಗಿದೆ. ಹಾಗಾಗಿ ವರಿಷ್ಠರು ಬಿ.ಎಸ್.ಯಡಿಯೂರಪ್ಪ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದು ಹೇಳಿದರು.

 


 ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಬಿಎಸ್.ವೈ ಶಕ್ತಿ ಸಾಮರ್ಥ್ಯ ಎಲ್ಲರಿಗೂ ಗೊತ್ತಿದೆ. ಹಿಂದೆ ಪ್ರವಾಹ ಬಂದಾಗ ಬೆಟ್ಟಗುಡ್ಡ ಹತ್ತಿಇಳಿದವರು ಬಿಎಸ್.ವೈ. ಎಂಥ ಕೆಟ್ಟ ಪರಿಸ್ಥಿತಿಯಲ್ಲೂ ಸಮರ್ಥವಾಗಿ ನಿಭಾಯಿಸಿದ್ದಾರೆ. ನಮ್ಮ ಸಿಎಂ ಮತ್ತು ಪಕ್ಷ ಜನರ ನಡುವೆ ಕೆಲಸ ಮಾಡುತ್ತದೆ. ಇದು ಜನರಿಗೂ ಗೊತ್ತಿದೆ ಎಂದು ಶ್ಲಾಘಿಸಿದರು.

ಶಿರಾದಲ್ಲಿ ಅನಿರೀಕ್ಷಿತವಾಗಿ ಉಪಚುನಾವಣೆ ಎದುರಾಗಿದೆ. ಸಧ್ಯದ ಸಂದಿಗ್ದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನ ನಿಯಂತ್ರಣಕ್ಕಾಗಿ ದುಡಿಯುತ್ತಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅಭಿವೃದ್ಧಿಯತ್ತ ಜನರ ಒಲವಿದೆ. ಹಾಗಾಗಿ ಆರ್.ಆರ್.ನಗರ ಮತ್ತು ಶಿರಾ ಮತ್ತು ಪದವೀಧರ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಸಾಮಾನ್ಯ ಜನರ ನೋವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ. ಜನರ ಸಮಸ್ಯೆ ಗಳನ್ನು ಆಲಿಸಿ ಪರಿಹಾರ ಮಾಡುತ್ತಿದೆ. ಜನರೂ ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ನಮ್ಮದು ಅಭಿವೃದ್ಧಿಯ ಸರ್ಕಾರ ಎಂದು ಸರ್ಕಾರದ ನಡೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು.

(ಮಾಹಿತಿ ಕೃಪೆ  ನಾನು ಗೌರಿ)  

 

ಯೋಗರಾಜ್ ಭಟ್ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಜತೆಗೆ ಪ್ರಭುದೇವ ಸಾಥ್!

 

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಯೋಗರಾಜ್ ಭಟ್ ಜತೆಗೆ ಚಿತ್ರವೊಂದನ್ನು ಮಾಡುತ್ತಾರೆನ್ನುವ ಸುದ್ದಿ ಕೆಲ ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದ್ದು ಭಟ್ರ ಚಿತ್ರಕಥೆಗೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದಲ್ಲದೆ ಈ ಚಿತ್ರದಲ್ಲಿ ಶಿವಣ್ಣನ ಜತೆಗೆ ದಕ್ಷಿಣ ಭಾರತದ ಖ್ಯಾತ ನಟ ಪ್ರಭುದೇವ ಸಹ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸೆನ್ಶೇಷನ್ ಮೂಡಿಸಿದೆ.

ನಾನು ಸ್ಕ್ರಿಪ್ಟ್ ಓದಿದ್ದೇನೆ. ಪ್ರಭುದೇವ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಶಿವರಾಜ್‌ಕುಮಾರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ಯೋಗರಾಜ್ ಭಟ್ ಅಸಾಧಾರಣ ಕಥೆಯೊಂದಿಗೆ ಬಂದಿದ್ದಾರೆ. ಕಥಾಹಂದರ ಅನನ್ಯವಾಗಿದೆ. ಅವರು ಪ್ರಭುದೇವ ಮತ್ತು ನನ್ನ ಎರಡೂ ಪಾತ್ರಗಳನ್ನು ಸಮಾನವಾಗಿ ತೋರಿಸಲಿದ್ದಾರೆ. ಪ್ರೀತಿಯ ಅಂಶವು ಇಡೀ ಚಿತ್ರಕ್ಕೆ ಸಾಕಷ್ಟು ತೂಕವನ್ನು ನೀಡುತ್ತದೆ" ಎಂದು ಶಿವಣ್ಣ ಹೇಳುತ್ತಾರೆ. ಪ್ರಭುದೇವ ಕೂಡ ಸ್ಕ್ರಿಪ್ಟ್ ಕೇಳಿದ್ದಾರೆ ಮತ್ತು ಅವರು ಅದನ್ನು ಇಷ್ಟಪಟ್ಟಿದ್ದಾರೆ. ಮೈಸೂರು ಮೂಲದ ಪ್ರಭುದೇವ ದಕ್ಷಿಣ ಭಾರತದ ಚಲನಚಿತ್ರೋದ್ಯಮ ಮತ್ತು ಬಾಲಿವುಡ್‌ನ ಖ್ಯಾತ ನಟ ಮತ್ತು ನಿರ್ದೇಶಕರಾಗಿದ್ದಾರೆ.

ಪ್ರಭುದೇವ ಕಡೆಯ ಬಾರಿಗೆ ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ "ಎಚ್ ಟು ಓ" ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ಉಪೇಂದ್ರ ಮತ್ತು ಪ್ರಿಯಾಂಕಾ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದರು. ಪ್ರಸ್ತುತ ಅವರು ಸಲ್ಮಾನ್ ಖಾನ್ ಅಭಿನಯದ "ರಾಧೆ" ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಭಟ್ರ ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ 2021 ರಲ್ಲಿ ಪ್ರಾರಂಭವಾಗಲಿದೆ.

"ಆರ್‌ಡಿಎಕ್ಸ್" ಚಿತ್ರದ ಶೂಟಿಂಗ್ ನವೆಂಬರ್ ನಲ್ಲಿ ಪ್ರಾರಂಭವಾಗಬೇಕಿದ್ದದ್ದು ಮುಂದೂಡಿಕೆಯಾಗಿದೆ ಶಿವಣ್ಣ ಅದನ್ನು ಪೂರ್ಣಗೊಳಿಸಬೇಕಿದೆ. ಇದಾಗಲೇ ಶಿವಣ್ನ ನಿರ್ದೇಶಕ ಎ ಹರ್ಷ ಅವರ "ಭಜರಂಗಿ 2" ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಮತ್ತು ಅವರ ಮುಂದಿನ ಯೋಜನೆಗಾಗಿ ನವೆಂಬರ್ ಗೆ ಸಿದ್ದವಾಗಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ರವಿ ಅರಸು ಅವರ "ಆರ್‌ಡಿಎಕ್ಸ್" ಮೊದಲು ತಯಾರಾಗಬೇಕಿತ್ತು. ಆದರೆ ಈಗ ಅದನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಶಿವಣ್ಣ ಈಗ ಛಾಯಾಗ್ರಾಹಕ, ನಿರ್ದೇಶಕ ವಿಜಯ್ ಮಿಲ್ಟನ್ ಅವರ ಯೋಜನೆಯಲ್ಲಿ ಕಾಣಿಸಿಕೊಳ್ಳಲು ತೀರ್ಮಾನಿಸಿದ್ದಾರೆ.

"ಆರ್‌ಡಿಎಕ್ಸ್"ಅನ್ನು ಮುಂದಿನ ಡೇಟ್ ಗೆಮುಂದೂಡಲಾಗಿದೆ. ಹಾಗಾಗಿ ಕೃಷ್ಣ ಸಾರ್ಥಕ್ ನಿರ್ಮಿಸಿದ ನಿರ್ದೇಶಕ ವಿಜಯ್ ಮಿಲ್ಟನ್ ಅವರ ಚಿತ್ರದ ಡೇಟ್ಸ್ ಗಳನ್ನು ನಾನು ನಿಗದಿಪಡಿಸುತ್ತೇನೆ, ಅದು ನವೆಂಬರ್ ಮೂರನೇ ವಾರದಲ್ಲಿ ಇದು ಪ್ರಾರಂಭವಾಗಲಿದೆ. ನಾನು ಏಕಕಾಲದಲ್ಲಿ ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುತ್ತೇನೆ, ಎಲ್ಲವೂ ದೃಢಪಟ್ಟ ನಂತರ ಅದರ ವಿವರಗಳು ಬಹಿರಂಗಗೊಳ್ಳುತ್ತವೆ 'ಎಂದು ಶಿವಣ್ಣ ಹೇಳಿದ್ದಾರೆ. 

(ಮಾಹಿತಿ ಕೃಪೆ ಕನ್ನಡ ಪ್ರಭ)   

ಶಾಸಕ ಯತ್ನಾಳ ಹೇಳಿಕೆ ಕುರಿತು ಪ್ರತಿಕ್ರಿಯೆಗೆ ಯಡಿಯೂರಪ್ಪ ನಕಾರ

 

 

ಬಳ್ಳಾರಿ: 'ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಉಳಿಯುವುದಿಲ್ಲ' ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಬಿ.ಎಸ್‌.ಯಡಿಯೂರಪ್ಪ ನಿರಾಕರಿಸಿದರು.

ಉತ್ತರ ಕರ್ನಾಟಕ ಜಿಲ್ಲೆಗಳ ವೈಮಾನಿಕ ಸಮೀಕ್ಷೆಗೆ ತೆರಳುವ ಮುನ್ನ ಜಿಂದಾಲ್‌ನ ಏರ್ ಸ್ಟ್ರಿಪ್‌ಗೆ ಬಂದಿಳಿದ ಅವರು, ಯತ್ನಾಳ ಹೇಳಿಕೆ ಕುರಿತು ಯಾವ ಪ್ರತಿಕ್ರಿಯೆಯನ್ನೂ ನೀಡದೆ ನಿರ್ಗಮಿಸಿದರು.

'ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಿದೆ, ಇಂದು ಕಲಬುರ್ಗಿ, ವಿಜಯಪುರ, ಯಾದಗಿರಿಗೆ ವೈಮಾನಿಕ ಸಮೀಕ್ಷೆಗೆ ಹೋಗುತ್ತಿದ್ದೇನೆ. ನಂತರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು' ಎಂದು ಸುದ್ದಿಗಾರರಿಗೆ ತಿಳಿಸಿದರು‌

'ಮನೆ ಕಳೆದುಕೊಂಡವರು ಹಾಗೂ, ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದು ಪರಿಹಾರ ಕೊಡಲಾಗುವುದು. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿದೆ' ಎಂದರು.

'ರಾಜ್ಯದಲ್ಲಿ ಆದ ಮಳೆ ನಷ್ಟದ ಕುರಿತು ಪ್ರಧಾನಮಂತ್ರಿಯ ಗಮನವನ್ನೂ ಸೆಳೆಯಲಾಗಿದೆ' ಎಂದರು.

(ಮಾಹಿತಿ ಕೃಪೆ ಪ್ರಜಾವಾಣಿ)  

 

PV Web Exclusive: ಗೇಲ್ 'ಯೂನಿವರ್ಸ್ ಬಾಸ್' ಆದದ್ದು ಹೀಗೆ...

 

 

ಬ್ರಯಾನ್ ಲಾರಾ ಪಾದಚಲನೆ, ರನ್ ಗಳಿಕೆಯ ವೇಗದಲ್ಲಿ ಬೆವರ ಹನಿಗಳು ಹೊಮ್ಮುತ್ತಿದ್ದವು. ಅದೇ ದೇಶವನ್ನು ಪ್ರತಿನಿಧಿಸಿದ ಕ್ರಿಸ್ ಗೇಲ್ ನಿಂತಲ್ಲೇ ಸಿಕ್ಸರ್ ಹೊಡೆದು ಮುಖ ಅರಳಿಸುತ್ತಾರೆ. ತಮ್ಮನ್ನು ತಾವೇ 'ಯೂನಿವರ್ಸ್ ಬಾಸ್' ಎಂದು ಅವರು ಕರೆದುಕೊಂಡಿದ್ದಾರೆ. ಅವರು ಹೊಡೆದಿರುವ ಸಿಕ್ಸರ್‌ಗಳನ್ನು ಎಣಿಸುತ್ತಾ ಬಂದರೆ ಆ ಮಾತಿನಲ್ಲಿ ಇರುವುದು ಆತ್ಮವಿಶ್ವಾಸ ಎನ್ನುವುದು ಸ್ಪಷ್ಟವಾಗುತ್ತದೆ.

ಬ್ರಯಾನ್ ಲಾರಾಗೆ ಒಂದು ಬಿರುದಿತ್ತು, 'ಪ್ರಿನ್ಸ್ ಆಫ್ ವೆಸ್ಟ್‌ಇಂಡೀಸ್' ಅಂತ. ಕ್ರಿಸ್‌ ಗೇಲ್ 2013ರಲ್ಲಿ ತಮಗೆ ತಾವೇ ಒಂದು ಬಿರುದು ಕೊಟ್ಟುಕೊಂಡರು, 'ಯೂನಿವರ್ಸ್ ಬಾಸ್' ಅಂತ. ಬ್ಯಾಟ್‌ನ ಹಿಂಬದಿಯಲ್ಲಿ ಕೂಡ 'ದಿ ಬಾಸ್' ಎಂದು ಬರೆದುಕೊಂಡು ಓಡಾಡುವಷ್ಟು ನಿಸ್ಸಂಕೋಚಿ. ಲಾರಾ ಮುಖದ ನಿರಿಗೆಗಳ ನಡುವೆ ಸದಾ ಸಂಕೋಚ ತುಳುಕುವಂತೆ ಕಾಣುತ್ತಿತ್ತು. ಗೇಲ್ ರಕ್ಕಸ ವಂಶದ ಕುಡಿಯಂದದಿ ಬೀಗುತ್ತಾರೆ. 1994ರಲ್ಲಿ ವಾರ್ವಿಕ್‌ಷೈರ್ ಪರವಾಗಿ ದುರ್ಹಮ್ ತಂಡದ ವಿರುದ್ಧ ಲಾರಾ 501 ರನ್ ಹೊಡೆದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಾದ ಅತಿ ಹೆಚ್ಚು ರನ್‌ಗಳು ಅವು. ಆ ದಾಖಲೆಯನ್ನು ಯಾರೂ ಅಳಿಸಲು ಆಗಿಲ್ಲ. ಅದಾದ ಮೇಲೆ ಇನ್ನೂ ಒಂದೂವರೆ ದಶಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದರು. ಐದಡಿ ಎಂಟು ಇಂಚು ಎತ್ತರದ ಲಾರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ 34 ಶತಕಗಳನ್ನು ಒಳಗೊಂಡ 11,953 ರನ್‌ಗಳನ್ನು ಸೇರಿಸಿದವರು. 52.88ರ ಸರಾಸರಿಯಲ್ಲಿ ಅಷ್ಟೊಂದು ರನ್ ಗಳಿಸುವುದೆಂದರೆ ಹೆಮ್ಮೆಯ ವಿಷಯ. ಗೇಲ್ ವಯಸ್ಸಿನಲ್ಲಿ ಲಾರಾ ಅವರಿಗಿಂತ ಹತ್ತು ವರ್ಷ ಚಿಕ್ಕವರು. ಈಗ 41ರ ಹರೆಯ. ಟ್ವೆಂಟಿ20 ಕ್ರಿಕೆಟ್‌ನಲ್ಲಿ ತಾವು ಯಾಕೆ ಬಾಸ್ ಎನ್ನುವುದನ್ನು ಸಾರುವಂತೆ ಇವತ್ತೂ ಅವರು ಸಿಕ್ಸರ್ ಹೊಡೆಯುತ್ತಿದ್ದಾರೆ. ಲಾರಾ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ಹೊಡೆದದ್ದು ಟೆಸ್ಟ್‌ನಲ್ಲಿ 88 ಹಾಗೂ ಏಕದಿನದ ಪಂದ್ಯಗಳಲ್ಲಿ 133 ಸಿಕ್ಸರ್‌ಗಳನ್ನು. ಅವರಿಗಿಂತ 28 ಕಡಿಮೆ ಟೆಸ್ಟ್ ಪಂದ್ಯಗಳಲ್ಲೇ ಗೇಲ್ 98 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಲಾರಾ ಅವರಿಗಿಂತ ಒಂದೇ ಒಂದು ಹೆಚ್ಚು ಏಕದಿನದ ಪಂದ್ಯಗಳನ್ನು ಆಡಿರುವ ದೈತ್ಯ 331 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನೂ ಸೇರಿಸಿಕೊಂಡರೆ ಅಕ್ಟೋಬರ್ 20ರ ವರೆಗೆ ಒಟ್ಟು 869 ಸಿಕ್ಸರ್‌ಗಳನ್ನು ಅವರು ಹೊಡೆದಿರುವುದನ್ನು ನೋಡಿ ಕಣ್ಣರಳಿಸಲೇಬೇಕು. ಬೌಂಡರಿಗಳನ್ನು ಲೆಕ್ಕ ಹಾಕಿದರೆ ಕಣ್ಣುಗಳು ಮತ್ತಷ್ಟು ಅಗಲಗೊಂಡಾವು. ಎಲ್ಲಾ ಪ್ರಕಾರದ ಕ್ರಿಕೆಟ್‌ಗಳಿಂದ 2678 ಬೌಂಡರಿಗಳು ಗೇಲ್‌ ಬ್ಯಾಟ್‌ನಿಂದ ಹರಿದಿವೆ. ಅವರ ವೃತ್ತಿಪರ ಕ್ರಿಕೆಟ್‌ ಬದುಕಿನ ಇದುವರೆಗಿನ ಒಟ್ಟು ರನ್‌ ಗಳಿಕೆ 23,912. ಅದರಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳಿಂದ ಜಮೆಯಾಗಿರುವ ಮೊತ್ತ 15,926. ಅಂದರೆ 7986 ರನ್‌ಗಳನ್ನಷ್ಟೇ ಅವರು ಓಡಿ ಗಳಿಸಿರುವುದು. ಹಾಗೆ ನೋಡಿದರೆ ಲಾರಾ ಬೌಂಡರಿ ಗಳಿಕೆಯಲ್ಲಿ ಗೇಲ್‌ ಅವರಿಗಿಂತ ಮುಂದು. ಯಾಕೆಂದರೆ, ಬರೀ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ಅವರು 2594 ಬೌಂಡರಿಗಳನ್ನು ಹೆಕ್ಕಿದ್ದಾರೆ.

ಅಂಕಿಸಂಖ್ಯೆಗೂ 'ಬಾಸ್‌' ಆಗುವುದಕ್ಕೂ ಸಂಬಂಧ ಇರುತ್ತದೆ. ಲಾರಾ, ಗೇಲ್ ಇಬ್ಬರೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದವರು. ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳು. ತಾಂತ್ರಿಕವಾಗಿ ಕಣ್ಣಿಗೆ ಹಿತವೆನ್ನಿಸುವ ಆಟವನ್ನು ಲಾರಾ ಆಡಿದರೆ, ಎದುರಾಳಿಗಳ ಧೂಳೀಪಟ ಮಾಡುವಂತೆ ಗೇಲ್ ಸಿಕ್ಸರ್‌ಗಳನ್ನು ಹೊಡೆಯುತ್ತಾರೆ. ಫಿಟ್‌ನೆಸ್ ವಿಷಯದಲ್ಲಿ ಲಾರಾಗೆ ಹೆಚ್ಚು ಅಂಕ ಸಲ್ಲುತ್ತದೆ. ಗೇಲ್ ಆರೋಗ್ಯ ಪದೇ ಪದೇ ಕೈಕೊಟ್ಟಿದೆ. ಅದಕ್ಕೆ ತಾಜಾ ಉದಾಹರಣೆ ಈ ಸಲ ಐಪಿಎಲ್ ಆಡಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಅವರು ಸೇರಿಕೊಂಡ ಮೇಲೂ ಫುಡ್ ಪಾಯ್ಸನಿಂಗ್‌ನಿಂದ ಬಳಲಿದ್ದರು. ಲಾರಾ ನಡೆ-ನೋಟ-ನಿಲುವಿನಲ್ಲಿ ವಿನಯ ಕಾಣುತ್ತದೆ. ಗೇಲ್ ಇವತ್ತಿಗೂ ತುಡುಗು ಹುಡುಗನಂತೆ ಭಾಸವಾಗುತ್ತಾರೆ. ಅವರ ವೇಷಭೂಷಣವೂ ಹಾಗೆಯೇ ಇದೆ. ಸಂಕೋಚವನ್ನು ದೂರದಲ್ಲೆಲ್ಲೋ ಇಟ್ಟುಬಂದಂತೆ ಅವರು ನಗಬಲ್ಲರು. ಭುಜಬಲ ತೋರಿಸಿ, ನಿಧಾನಕ್ಕೆ ಕೈಕಾಲು ಆಡಿಸಿ ನಗಿಸಲೂ ಬಲ್ಲರು.

ಇಪ್ಪತ್ತು ವರ್ಷಗಳ ಹಿಂದೆ ಗೇಲ್ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ಲಾರಾ ಇನ್ನೂ ಒಳ್ಳೆಯ ಫಾರ್ಮ್‌ನಲ್ಲಿ ಇದ್ದರು. ಅವರಿಂದ ಗೇಲ್ ಅದೇನನ್ನು ಕಲಿತರೋ ಗೊತ್ತಿಲ್ಲ. ಆದರೆ, ಟೆಸ್ಟ್ ಕ್ರಿಕೆಟ್ ಮೇಲಿನ ಪ್ರೀತಿಯನ್ನಂತೂ ಉಳಿಸಿಕೊಂಡರು. ಇಂದಿಗೂ ಅವರು ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗಿಲ್ಲ. ಅವಕಾಶ ಸಿಕ್ಕರೆ ಮತ್ತೊಮ್ಮೆ ಆಡಲು ಸೈ ಎನ್ನುತ್ತಾರೆ. ಸರ್ ಡಾನ್ ಬ್ರಾಡ್‌ಮನ್, ಬ್ರಯಾನ್ ಲಾರಾ, ವೀರೇಂದ್ರ ಸೆಹ್ವಾಗ್ ಇವರೆಲ್ಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕಗಳ ಸರದಾರರೆನ್ನಿಸಿಕೊಂಡಿದ್ದರು. ಆ ಪಟ್ಟಿಗೂ ಗೇಲ್ ಸೇರಿಕೊಂಡರು. ಏಕದಿನ ಪಂದ್ಯಗಳಲ್ಲಿ ಅತಿ ವೇಗದ ದ್ವಿಶತಕ ದಾಖಲಾಗಿದ್ದುದು ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿ. ಕ್ಯಾನ್‌ಬೆರಾದಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 147 ಎಸೆತಗಳಲ್ಲೇ ಆ ಗಡಿಯನ್ನು ದಾಟಿದ ಗೇಲ್ ಆ ದಾಖಲೆಯನ್ನೂ ಅಳಿಸಿಹಾಕಿದರು. 2015ರಲ್ಲಿ ಆ ಇನಿಂಗ್ಸ್ ಬಂದಾಗ ಗೇಲ್ ವಯಸ್ಸು 36 ವರ್ಷ. ವಿಂಡೀಸ್ ಪರವಾಗಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರೂ ಅವರೇ (10,480).

ಗೇಲ್‌ ವೇಗವಾಗಿ ಓಡಲಾರರು. ಅವರ ಯೌವನದ ದಿನಗಳಲ್ಲೂ ಪರಿಸ್ಥಿತಿ ಹಾಗೆಯೇ ಇತ್ತು. ಅದಕ್ಕೇ ಅವರು ಹಾರ್ಡ್ ಹಿಟಿಂಗ್ ಅನ್ನೇ ತಮ್ಮ ಆಟದ ಶೈಲಿಯಾಗಿಸಿಕೊಂಡದ್ದು. ಟೆಸ್ಟ್‌ ಪಂದ್ಯದ ಮೊದಲ ಎಸೆತವನ್ನು ವಿಶ್ವದ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಸಿಕ್ಸರ್‌ಗೆ ಅಟ್ಟಿಲ್ಲ. ಯಾವ ಪ್ರಕಾರದ ಆಟವಾಗಲಿ, ಹೊಡಿ-ಬಡಿ ಎನ್ನುವುದೇ ತಮ್ಮ ತಂತ್ರ ಎಂದುಕೊಂಡವರು ಆರಡಿಗೂ ಎತ್ತರದ ಈ ದೈತ್ಯ. 2007ರಲ್ಲಿ ಐಸಿಸಿ ವಿಶ್ವ ಟ್ವೆಂಟಿ20 ಕ್ರಿಕೆಟ್ ಟೂರ್ನಿ ಪ್ರಾರಂಭವಾಯಿತು. ಲಾರಾ ಏಕದಿನ ಪಂದ್ಯಗಳಿಗೆ ಗುಡ್‌ಬೈ ಹೇಳಿದ ವರ್ಷವೂ ಅದೇ. ದಕ್ಷಿಣ ಆಫ್ರಿಕಾ ವಿರುದ್ಧವೇ ವಿಂಡೀಸ್‌ನ ಮೊದಲ ಪಂದ್ಯ. ಗೇಲ್ 57 ಎಸೆತಗಳಲ್ಲಿ 117 ರನ್ ಗಳಿಸಿದರು. ಹತ್ತು ಸಿಕ್ಸರ್‌ಗಳನ್ನು ಆ ಇನಿಂಗ್ಸ್ ಒಳಗೊಂಡಿತ್ತು. ಆಡಿದ ಮೊದಲ ಚುಟುಕು ಪಂದ್ಯದಲ್ಲೇ ಶತಕ ಗಳಿಸಿ, ಅವರು ಇನ್ನೊಂದು ದಾಖಲೆ ಬರೆದರು. ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿ ಶುರುವಾದಾಗ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಅವರನ್ನು ದೊಡ್ಡ ಮೊತ್ತಕ್ಕೆ ಹರಾಜಿನಲ್ಲಿ ಪಡೆದುಕೊಂಡಿತು. ಅಂದುಕೊಂಡಷ್ಟು ಚೆನ್ನಾಗಿ ಅವರು ಆಡಲಿಲ್ಲ. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡ ಮೇಲೆ ಅದೃಷ್ಟ ಬದಲಾಯಿತು. 332 ಎಸೆತಗಳಲ್ಲಿ 608 ರನ್‌ಗಳನ್ನು ಆ ವರ್ಷ ಗೇಲ್ ಕಲೆಹಾಕಿದರು. ಅದರ ನಂತರದ ವರ್ಷ 708 ರನ್ ಜಮೆ ಮಾಡಿ, ಫಾರ್ಮ್ ಮುಂದುವರಿಸಿದರು. 2014ರಲ್ಲಿ ಮತ್ತೆ ವೈಫಲ್ಯ. 2015ರಲ್ಲಿ 491 ರನ್‌ಗಳನ್ನು ಐಪಿಎಲ್‌ನಲ್ಲಿ ಗಳಿಸಿದರು. ಈಗ ಕಿಂಗ್ಸ್ ಇಲೆವೆನ್ ಪಂಜಾಬ್ ಅವರ ಮೇಲೆ ಭರವಸೆ ಇಟ್ಟಿದೆ. ಕಳೆದ ಋತುವಿನಲ್ಲಿ 319 ಎಸೆತಗಳಲ್ಲಿ 490 ರನ್‌ ಗಳಿಸಿ ವಯಸ್ಸಾದಷ್ಟೂ ತಾವು ಪ್ರಭಾವಿ ಎನ್ನುವುದನ್ನು ಗೇಲ್ ಸಾಬೀತುಪಡಿಸಿದ್ದರು. ಎರಡು ಮೂರು ಪಂದ್ಯಗಳಲ್ಲಿ ತಮ್ಮ ತಂಡಕ್ಕೆ ಗೆಲುವನ್ನು ಒಬ್ಬರೇ ನಿಂತು ದಕ್ಕಿಸಿಕೊಟ್ಟಿದ್ದರು.

ಇಂಗ್ಲೆಂಡ್‌ನಲ್ಲಿ ಮೊದಲು ವೃತ್ತಿಪರ ಕ್ರಿಕೆಟ್ ಶುರುವಾದಾಗ 1871ರಲ್ಲಿ ಡಬ್ಲ್ಯುಜಿ ಗ್ರೇಸ್ ತಮ್ಮದೇ ನೆಲದಲ್ಲಿ ಹೆಸರುವಾಸಿಯಾಗಿದ್ದರು. ಯಾಕೆಂದರೆ, 23 ವರ್ಷ ತುಂಬುವಷ್ಟರಲ್ಲಿ ಹತ್ತು ಶತಕಗಳು ಅವರ ಬ್ಯಾಟ್‌ನಿಂದ ಹೊಮ್ಮಿದ್ದವು. ಮೊದಲ 17 ಶತಕಗಳಲ್ಲಿ ಅವರದ್ದೇ ಅಷ್ಟೊಂದು ಎನ್ನುವುದು ಆ ಕಾಲಘಟ್ಟದಲ್ಲಿ ದೊಡ್ಡ ಸುದ್ದಿ. ಸಸೆಕ್ಸ್ ವಿರುದ್ಧ 104 ರನ್ ಗಳಿಸಿ ಗ್ಲೌಸೆಸ್ಟರ್ ತಂಡಕ್ಕೆ ಜೀವಾನಿಲವೆಂಬಂತೆ ಇಂಗ್ಲೆಂಡ್‌ನ ಗ್ರೇಸ್ ಆಡಿದಾಗ 50ನೇ ಶತಕ ಅವರ ಬ್ಯಾಟ್‌ನಿಂದ ದಾಖಲಾಯಿತು. 1876ರ ಹೊತ್ತಿಗೆ ಅಂಥದೊಂದು ಸಾಧನೆಯನ್ನು ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾಡಿದ್ದರು. ಶತಕ ಗಳಿಸುವುದು ಕ್ರಿಕೆಟ್ ಪ್ರಾರಂಭವಾದ ಶತಮಾನದಲ್ಲಿ ಹೆಮ್ಮೆಯ ಸಂಗತಿಯಾಗಿತ್ತು. ಇವತ್ತಿಗೂ ಆ ವಿಷಯದಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಟ್ವೆಂಟಿ20 ಕ್ರಿಕೆಟ್‌ನಲ್ಲಿ ಶತಕ ದಾಖಲಿಸುವುದು ಕಷ್ಟವೇ ಸರಿ. ಗೇಲ್ ಇದುವರೆಗೆ ಐಪಿಎಲ್‌ನಲ್ಲೇ ಆರು ಶತಕಗಳನ್ನು ಕಲೆಹಾಕಿದ್ದಾರೆ. ಗ್ರೇಸ್‌ ಬ್ಯಾಟ್ಸ್‌ಮನ್‌ಷಿಪ್ ರೀತಿಯೂ ಗೇಲ್ ಆಟಕ್ಕೂ ಅಜಗಜಾಂತರ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಬರೀ 31 ಎಸೆತಗಳಲ್ಲಿ ನೂರು ರನ್‌ಗಳ ಗಡಿ ದಾಟಿ, ಆಮೇಲೆ 175ರ ವರೆಗೆ ಮೊತ್ತ ಹಿಗ್ಗಿಸಿ, ಔಟಾಗದೆ ಉಳಿದ ಇನಿಂಗ್ಸ್‌ ಅನ್ನು ಮರೆಯಲಾಗದು. ಆರ್‌ಸಿಬಿ ಕೂಡ ಅದನ್ನು ಮರೆಯುವುದಿಲ್ಲ. 66 ಎಸೆತ, 13 ಬೌಂಡರಿ, 17 ಸಿಕ್ಸರ್-ಇದು ಆ ಇನಿಂಗ್ಸ್‌ನ ವೈಶಿಷ್ಟ್ಯ.

ಈಗ ಕೆ.ಎಲ್. ರಾಹುಲ್ ಕಿಂಗ್ಸ್‌ ಇಲೆವೆನ್ ತಂಡದ ನಾಯಕ. ಅವರ ಆಟ ಕೂಡ ಗ್ರೇಸ್ ಆಡುತ್ತಿದ್ದಂತೆಯೇ ಇದೆ. ವಿರಾಟ್‌ ಕೊಹ್ಲಿ ಹೇಗೆ ಬೌಂಡರಿಗಳನ್ನು ಗಳಿಸುತ್ತಾ, ಆಗೀಗ ಸಿಕ್ಸರ್ ಹೊಡೆಯುವರೋ ಹಾಗೆ. ಇಂತಹ ನಾಯಕ ಸೂಪರ್‌ಓವರ್‌ನಲ್ಲಿ ಮತ್ತೆ ನಲವತ್ತೊಂದರ ಗೇಲ್‌ ಕೈಗೇ ಮೊನ್ನೆ ಮೊನ್ನೆ ಬ್ಯಾಟ್‌ ಕೊಟ್ಟು ಕಳುಹಿಸಬೇಕಾಯಿತು. ಟ್ರೆಂಟ್ ಬೌಲ್ಟ್ ಹಾಕಿದ ಫುಲ್‌ಟಾಸನ್ನು ಸಿಕ್ಸರ್‌ಗೆ ಎತ್ತಿ, ತಂಡವನ್ನು ಗೆಲುವಿನ ಹಳಿ ಮೇಲೆ ತಂದು ನಿಲ್ಲಿಸಿ ಮತ್ತೆ ಈ ದೈತ್ಯ ನಕ್ಕರು. ಅದಕ್ಕೂ ಮೊದಲು ಅವರಿಗೆ ಸಿಟ್ಟು ಬಂದಿತ್ತಂತೆ. ಚೆನ್ನಾಗಿ ಆಡಿಯೂ ಈ ಬಾರಿ ಐಪಿಎಲ್‌ನ ಮೊದಲರ್ಧದಲ್ಲಿ ಸೋಲುಗಳನ್ನೇ ಹೆಚ್ಚಾಗಿ ಕಂಡ ಪಂಜಾಬ್‌ಗೆ ಈಗ ಗೇಲ್ ಇಂಧನದಂತೆ ಕಾಣುತ್ತಿದ್ದಾರೆ. ಮೂರು ಪಂದ್ಯಗಳಲ್ಲಿ ಅವರು 106 ರನ್‌ಗಳನ್ನು ಗಳಿಸಿದ್ದರೂ ಟ್ರೇಡ್‌ ಮಾರ್ಕ್ ಸಿಕ್ಸರ್‌ಗಳು ಕಾಣಸಿಗುತ್ತಿವೆ. ಹಿಂದೊಮ್ಮೆ ಅವರು ಆಸ್ಟ್ರೇಲಿಯಾದ ಬ್ರೆಟ್‌ ಲೀ ಎಸೆತವನ್ನು ಸಿಕ್ಸರ್‌ಗೆ ಎತ್ತಿದಾಗ ಚೆಂಡು ಓವಲ್ ಕ್ರೀಡಾಂಗಣದ ಹೊರಗಿದ್ದ ಲಾರ್ಡ್‌ ಟೆನಿಸನ್ ಸ್ಕೂಲ್‌ ಬಳಿಗೆ ಹೋಗಿ ಬಿದ್ದಿತ್ತು. ಅದಕ್ಕೇ ಮಕ್ಕಳಿಗೆ ಅವರ ಆಟವೆಂದರೆ ಇಷ್ಟ. ಐಪಿಎಲ್‌ನಲ್ಲಿ ಇದುವರೆಗೆ 335 ಸಿಕ್ಸರ್‌ಗಳನ್ನು ಹೊಡೆದಿರುವ ಅವರು ತಮ್ಮನ್ನು ತಾವು 'ಯೂನಿವರ್ಸ್ ಬಾಸ್' ಎಂದು ಕರೆದುಕೊಳ್ಳುವುದನ್ನು ನಿರ್ಲಜ್ಜೆಯ ಸಂಕೇತ ಎಂದುಕೊಳ್ಳಲಾಗದು; ಅದು ಆತ್ಮವಿಶ್ವಾಸದ ರುಜು.

(ಮಾಹಿತಿ ಕೃಪೆ ಪ್ರಜಾವಾಣಿ) 

 

ಕಳೆದ 24 ಗಂಟೆಯಲ್ಲಿ ದೇಶದಾದ್ಯಂತ 54,044 ಮಂದಿಗೆ ಕೊರೊನಾ, 717 ಸಾವು..!

 


ನವದೆಹಲಿ/ಮುಂಬೈ, ಅ.21-ಭಾರತದಲ್ಲಿ ಕೊರೊನಾ ವೈರಸ್‍ನ ಹಾವಳಿಯ ಏರಿಳಿತ ಮುಂದುವರಿದಿದ್ದರೂ, ಹೆಮ್ಮಾರಿಯ ಆರ್ಭಟ ಗರಿಷ್ಠಕ್ಕೇರಿ ಇಳಿಮುಖವಾಗುತ್ತಿರುವ ಸ್ಪಷ್ಟ ಸೂಚನೆಗಳು ಕಂಡುಬರುತ್ತಿವೆ. ನಿನ್ನೆ ಮತ್ತೆ ಹೊಸ ಪ್ರಕರಣಗಳಲ್ಲಿ ತುಸು ಏರಿಕೆ ಕಂಡುಬಂದಿದ್ದರೂ, ಸತತ ಮೂರನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿವೆ. ಅಲ್ಲದೆ, ಸತತ ಐದನೆ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ. ಇದೇ ವೇಳೆ ಸಾವಿನ ಪ್ರಮಾಣ ಕೊಂಚ ಏರಿಕೆ ಗೋಚರಿಸಿದೆ.

24 ತಾಸುಗಳ ಅವಧಿಯಲ್ಲಿ 54,044 ಮಂದಿಗೆ ಹೊಸದಾಗಿ ರೋಗ ಕಾಣಿಸಿಕೊಂಡಿದೆ. ಮೊನ್ನೆ 46,760 ಹೊಸ ಕೇಸ್‍ಗಳು ದಾಖಲಾಗಿತ್ತು. ಮೂರು ತಿಂಗಳ ಬಳಿಕ ಇಷ್ಟು ಪ್ರಮಾಣದಲ್ಲಿ ಹೊಸ ಪ್ರಕರಣಗಳು ತಗ್ಗಿರುವುದು ಇದೇ ಮೊದಲು. ಭಾನುವಾರ 55,722ರಷ್ಟು ಕೇಸ್ ವರದಿಯಾಗಿತ್ತು. ದಿನನಿತ್ಯದ ಪಾಸಿಟಿವ್ ಕೇಸ್‍ಗಳಲ್ಲಿ ಸತತ ಮೂರನೆ ದಿನ 60,000ಕ್ಕಿಂತ ಕಡಿಮೆ ವರದಿಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಇದೇ ವೇಳೆ ದಿನನಿತ್ಯದ ಸಾವು ಪ್ರಕರಣಗಳಲ್ಲೂ ಅಲ್ಪ ಏರಿಕೆ ಕಂಡುಬಂದಿದ್ದು, 24 ತಾಸುಗಳ ಅವಧಿಯಲ್ಲಿ 717 ಮಂದಿ ಸೋಂಕು ರೋಗಕ್ಕೆ ಬಲಿಯಾಗಿದ್ದಾರೆ. ಮೊನ್ನೆ 587 ರೋಗಿಗಳನ್ನು ಹೆಮ್ಮಾರಿ ಆಪೋಶನ ತೆಗೆದುಕೊಂಡಿತ್ತು. ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 76.51 ಲಕ್ಷ ಮತ್ತು ಮೃತರ ಸಂಖ್ಯೆ 1.16 ಲಕ್ಷ ದಾಟಿರುವುದು ಜನರಲ್ಲಿ ಭಯಾಂತಕ ಮುಂದುವರಿಯುವಂತೆ ಮಾಡಿದೆ.

ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 67.95 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.88.810ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.51ರಷ್ಟು ತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿದೆ. ದೇಶದಲ್ಲಿ ಮೃತರ ಸಂಖ್ಯೆ 1,15,924 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 76,51,107ರಷ್ಟಿದ್ದು, ನಾಳೆ ವೇಳೆಗೆ 77 ಲಕ್ಷ ದಾಟಲಿದೆ.

ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.11ರಂದು 70 ಲಕ್ಷ ತಲುಪಿದೆ. ಇನ್ನೆರಡು ದಿನಗಳಲ್ಲಿ 80 ಸಾವಿರ ತಲುಪುವ ಆತಂಕವೂ ಇದೆ. 45 ದಿನಗಳ ಬಳಿ ಕಳೆದ ನಾಲ್ಕು ದಿನಗಳಿಂದ 8 ಲಕ್ಷಕ್ಕಿಂತ ಕಡಿಮೆ ಇಳಿದಿದ್ದು, ನಿನ್ನೆ 7,40,090 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ ಈ ಮಧ್ಯೆ ಐಸಿಎಂಆರ್ ದೇಶಾದ್ಯಂತ ನಿನ್ನೆ 10.83 ಲಕ್ಷ ಮಂದಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದ್ದು, ಈವರೆಗೆ 9.72 ಜನರನ್ನು ಕೋವಿಡ್-19 ಸ್ಯಾಂಪಲ್ ಟೆಸ್ಟ್‍ಗೆ ಒಳಪಡಿಸಲಾಗಿದೆ.

(ಮಾಹಿತಿ ಕೃಪೆ ಈ ಸಂಜೆ)

Tuesday, October 20, 2020

ಲಾಕ್‌ಡೌನ್‌ ಮುಗಿದಿದೆ, ಆದರೆ ಕೊರೊನಾ ಮುಗಿದಿಲ್ಲ: ಪ್ರಧಾನಿ ಮೋದಿ ಎಚ್ಚರಿಕೆ

 

 

ಲಾಕ್‌ಡೌನ್‌ ಮುಗಿದಿದೆ. ಆದರೆ ಕೊರೊನಾ ಮುಗಿದಿಲ್ಲ. ಕೊರೊನಾ ಔಷಧಿ ಸಿಗುವವರೆಗೂ ನಾವು ಉಡಾಫೆ ಮಾಡದೇ ಹೋರಾಟ ಮುಂದುವರೆಸಬೇಕಾಗಿದೆ. ಇದು ಹಬ್ಬಗಳ ಸಮಯವಾಗಿದೆ. ಸಂತೋಷದ ಸಮಯವಾದರೂ ಸಹ ನಾವು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಮೋದಿ ತಿಳಿಸಿದ್ದಾರೆ.

ದೇಶವನ್ನುದ್ದೇಶಿಸಿ ಮಾತನಾಡಿದ ಅವರು “ಕೊರೊನಾ ವಿರುದ್ಧದ ಹೋರಾಟದಲ್ಲಿ ಜನತಾ ಕರ್ಫ್ಯೂನಿಂದ ಹಿಡಿದು ಇಲ್ಲಿಯವರೆಗೂ ಭಾರತೀಯ ಜನರು ಹೋರಾಟ ನಡೆಸಿದ್ದಾರೆ. ನಾವು ಕೊರೊನಾಗೆ ಔ‍ಷಧಿ ಕಂಡುಹಿಡಿಯಲು ಯೋಜನೆ ರೂಪಿಸಿದ್ದೇವೆ. ಈ ಎಂಟು ತಿಂಗಳಿನ ನಂತರ ಕೊರೊನಾ ಚೇತರಿಕೆಯ ಪ್ರಮಾಣ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆಯಾಗಿದೆ ಎಂದರು.

ಸೇವಾ ಪರಮೋಧರ್ಮ ಮಂತ್ರದ ಆಧಾರದಲ್ಲಿ ವೈದ್ಯರು, ನರ್ಸ್‌ಗಳು, ಕೊರೊನಾ ವಾರಿಯರ್ಸ್, ಪೌರಕಾರ್ಮಿಕರು ಕೊರೊನಾ ವಿರುದ್ಧ ಹೋರಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ತಿಳಿಸಬೇಕು ಎಂದರು.

ಇದು ಹಬ್ಬಗಳ ಸಮಯ. ನವರಾತ್ರಿ, ದಸರಾ, ಈದ್, ದೀಪಾವಳಿ, ದುರ್ಗಾಪೂಜಾ, ಷಡ್‌ಪೂಜಾ, ಗುರುನಾನಕ್ ಜಯಂತಿ ಬರುತ್ತಿವೆ. ಹಾಗಾಗಿ ಕೊರೊನಾ ಉಲ್ಭಣಿಸದಂತೆ ಮುಂಜಾಗ್ರತೆಯಿಂದ ನಡೆದುಕೊಳ್ಳಬೇಕು ಎಂದು ಮೋದಿ ಕರೆ ನೀಡಿದರು.

ಪ್ರಧಾನಿ ಭಾಷಣಕ್ಕೂ ಮೊದಲು “ಆತ್ಮೀಯ ಪ್ರಧಾನಿಗಳೆ, ನಿಮ್ಮ ಸಂಜೆ 6 ಗಂಟೆಯ ಭಾಷಣದಲ್ಲಿ ನೀವು ಚೀನಿಯರನ್ನು ಭಾರತೀಯ ಭೂಪ್ರದೇಶದಿಂದ ಹೊರಹಾಕುವ ದಿನಾಂಕವನ್ನು ದಯವಿಟ್ಟು ದೇಶಕ್ಕೆ ತಿಳಿಸಿ. ಧನ್ಯವಾದಗಳು” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು.

(ಮಾಹಿತಿ ಕೃಪೆ ನಾನು ಗೌರಿ)